ಅರ್ಜುನನ ಗಜಗಾಂಭೀರ್ಯಕ್ಕೆ ಮನಸೋತು ಒಂದು ವರ್ಷ ದತ್ತು ಪಡೆದಿದ್ದ ನಟ ದರ್ಶನ್
ಮೈಸೂರು ದಸರಾ ಅಂದ್ರೆ ಇಡೀ ಜಗತ್ತಿಗೆ ಗೊತ್ತು. ಅದರಲ್ಲೂ ಮೈಸೂರು ದಸರಾ ವೇಳೆ ನಡೆಯುವ ‘ಜಂಬೂ ಸವಾರಿ’ ಯಾರಿಗೆ ಗೊತ್ತಿಲ್ಲ ಹೇಳಿ? ಆದರೆ ಇಂದು ನಡೆಯಬಾರದ ಘಟನೆ ನಡೆದಿದೆ. ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ, ಬರೋಬ್ಬರಿ 8 ಬಾರಿ ಅಂಬಾರಿಯ ಹೊತ್ತಿದ್ದ, ಅರ್ಜುನ ಆನೆ ಇಂದು ಕಾಡಾನೆ ದಾಳಿಗೆ ಬಲಿಯಾಗಿದೆ. ಈ ಬಗ್ಗೆ ನಟ ಡಿ-ಬಾಸ್ ದರ್ಶನ್ ಹೇಳಿದ್ದೇನು ಗೊತ್ತಾ?
ಇಂದು ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಯಸಳೂರು ವಲಯದಲ್ಲಿ ನಡೆಯುತ್ತಿತ್ತು. ನಡು ತೋಪಿನಲ್ಲಿ ಬೆಳಗ್ಗೆಯಿಂದಲೇ ಕಾಡಾನೆ ಗುರುತಿಸಿ, ಅದರ ಮೇಲೆ ನಿಗಾ ವಹಿಸಿದ್ದರು ಅಧಿಕಾರಿಗಳು. ಕಾಡಾನೆಗಳು ಇರುವ ಸ್ಥಳಕ್ಕೆ ಹೋದಾಗ 12 ಆನೆ ಇದ್ದವು. ಆ ಕಾಡಾನೆಗಳ ಗುಂಪನ್ನು ಒಂದು ಗಂಡಾನೆ ಲೀಡ್ ಮಾಡುತ್ತಿತ್ತು. ಸಾಕಾನೆ ಹೋದಾಗ ಚಾರ್ಜ್ ಮಾಡಲು ಬಂದಿದೆ. ಮುಂದೆ ನಡೆದಿದೆಲ್ಲವೂ ದುರಂತ.
ಡಾಕ್ಟರ್ ಗಂಡಾನೆ ಮತ್ತಿನಲ್ಲಿ ಇರುವುದನ್ನು ಗಮನಿಸಿದ್ದಾರೆ. ಆಗಲೇ, ಅರ್ಜುನ ಆನೆ ಗಂಡು ಕಾಡಾನೆ ಜೊತೆ ಕಾದಾಟಕ್ಕೆ ಇಳಿದಿದೆ. ಕಾಡಾನೆಯು ಅರ್ಜುನ ಮೇಲೆ ದಾಳಿ ಮಾಡಿದ್ದರಿಂದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಮೃತಪಟ್ಟಿದೆ. 2012 ರಿಂದ 2019ರ ತನಕ ಅರ್ಜುನ ಆನೆಯು ಮೈಸೂರು ದಸರಾ ಮಹೊತ್ಸವದಲ್ಲಿ ಅಂಬಾರಿ ಹೊತ್ತು ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಿತ್ತು. ಈ ಕುರಿತು ನಟ ಡಿ-ಬಾಸ್ ದರ್ಶನ್, ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.
ನಿಮಗೆಲ್ಲಾ ಗೊತ್ತಿರುವಂತೆ ನಟ ದರ್ಶನ್ ಅವರಿಗೆ ವೈಲ್ಡ್ ಲೈಫ್ ಬಗ್ಗೆ ಹಾಗೂ ಪ್ರಾಣಿಗಳ ಬಗ್ಗೆ ಸಾಕಷ್ಟು ಪ್ರೀತಿ. ಅದರಲ್ಲೂ ದರ್ಶನ್ ಅವರು ಆಗಾಗ ಡಿಎಸ್ಎಲ್ಆರ್ ಕ್ಯಾಮೆರಾ ತೆಗೆದುಕೊಂಡು ಕಾಡಿಗೆ ಹೋಗ್ತಾರೆ, ಚಾರಣ ಅಂದರೆ ಟ್ರೆಕ್ಕಿಂಗ್ ಮಾಡುತ್ತಾರೆ. ಹೀಗಿದ್ದಾಗ ಮೈಸೂರಿನವರೇ ಆಗಿರುವ ದರ್ಶನ್ ಅವರಿಗೆ, ಅಂಬಾರಿ ಆನೆ ಅರ್ಜುನನ ಸಾವು ನೋವು ತರಿಸಿದೆ. ಹೀಗಾಗಿ ಅವರು ಟ್ವಿಟ್ಟರ್ನಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ ದರ್ಶನ್ ಅವರು, ‘೮ ಬಾರಿ ದಸರಾ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ ೬೪ ವರ್ಷದ ‘ಅರ್ಜುನ’ ಇಂದು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ! ಓಂ ಶಾಂತಿ!’ ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ದರ್ಶನ್ ಅವರ ಅಭಿಮಾನಿಗಳು ಕೂಡ ಕಂಬನಿ ಮಿಡಿದಿದ್ದಾರೆ.