• Uncategorised

ಒಂದೇ ಬೈಕ್‌ನಲ್ಲಿ ನಾಲ್ವರ ರೈಡಿಂಗ್, ಕೊನೆಗೆ ಯಮನ ಪಾದ ಸೇರಿದ ಕುಟುಂಬ

ಸಫಾರಿಗೆ ಎಂದು ಹೊರಟಿದ್ದ ದಂಪತಿಗಳು ಹಾಗೂ ಮಕ್ಕಳು ಸೇರಿದ್ದು ಸಾವಿನ ಮನೆಗೆ ಹೌದು ಸಂಕ್ರಾಂತಿ ಹಬ್ಬದ ರಜೆಯ ಗುಂಗಿನಲ್ಲಿ ಕುಟುಂಬದ ಜೊತೆ ಬಂಡೀಪುರದ ಸಫಾರಿಗೆ ತೆರಳಲು ಹೋಗುತ್ತಿದ್ದ ಒಂದೇ ಕುಟುಂಬದ ನಾಲ್ವರು ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಘಟನೆ ಕೊಳ್ಳೆಗಾಲದ ಸಮೀಪದ ಪಾಳ್ಯ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಸಂತೋಷ್, ಸೌಮ್ಯ ಹಾಗೂ ದಂಪತಿಯ ಮಕ್ಕಳಾದ ನಿತ್ಯ ಸಾಕ್ಷಿ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಪುಟ್ಟ ಮಗುವು ಕೂಡ ಅಪ್ಪ ಅಮ್ಮನ ಜೊತೆಗೆ ಇನ್ನಿಲ್ಲವಾಗಿದೆ.

ಇವರೆಲ್ಲ ಸಂಕ್ರಾಂತಿ ರಜೆಯ ಪ್ರಯುಕ್ತ ಬೈಕ್‍ನಲ್ಲಿ ಬಂಡೀಪುರ ಸಫಾರಿ ತೆರಳಲು ಸಜ್ಜಾಗಿದ್ದರು. ಬೆಳಗ್ಗೆ 11 ಗಂಟೆಗೆ ರೆಡಿಯಾದ ನಾಲ್ವರು ಬೈಕ್ ಏರಿ ಕೊಳ್ಳೆಗಾಲದ ಚರ್ಚ್‍ಗೆ ತೆರಳಿ ಪ್ರಾರ್ಥನೆ ಮಾಡಿ ಬಳಿಕ ಹೊರಟಿದ್ದರು. ಈ ವೇಳೆ ಓವರ್ ಟೇಕ್ ಮಾಡುವ ವೇಳೆ ಎದುರಿಗೆ ಬಂದ ಭತ್ತ ಕಟಾವು ಮಾಡುವ ಯಂತ್ರಕ್ಕೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಮೃತದೇಹಗಳು ಯಂತ್ರದ ಚೂಪಾದ ಭಾಗಗಳಲ್ಲಿ ಸಿಲುಕಿದ್ದು ಮನಕಲಕುವಂತಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಳ್ಳೆಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.

You may also like...